ಈಗಾಗಲೇ ʼಎನಿ ವನ್ ಬಟ್ ದಿ ಸ್ಪೌಸ್ʼ ಎನ್ನುವ ಇಂಗ್ಲೀಷ್ ಕಿರುಗತೆಗಳ ಸಂಕಲನ ಪ್ರಕಟಿಸಿರುವ ಪೂರ್ಣಿಮಾ ಮಾಳಗಿಮನಿ ಅವರ ಮೊದಲ ಕಾದಂಬರಿ "ಇಜಯಾ". ಕನ್ನಡದ ಮಹತ್ವದ ಕತೆಗಾರರಾದ ʼಕೇಶವ ಮಳಗಿʼ ಅವರು ಈ ಕೃತಿಗೆ "ಸುಖದ ಪರಿಕಲ್ಪನೆ ಮತ್ತು ಕನಸು ದುಸ್ವಪ್ನವಾಗುವ ಭಯಾನಕತೆ" ಎನ್ನುವ ಮುನ್ನುಡಿ ಬರೆದಿದ್ದು, ಮಹತ್ವದ ವಿಮರ್ಶಕರಾದ ನರೇಂದ್ರ ಪೈ ಅವರು ಬೆನ್ನುಡಿಯಲ್ಲಿ "ಒಂದು ಸುಂದರ ಕಥನದ ಓಘದಲ್ಲಿ ಪೂರ್ಣಿಮಾ ಅವರು ಇದನ್ನು ಓದುಗನ ಮನಸ್ಸಿನಲ್ಲಿ "ಹುಳ" ಬಿಟ್ಟಂತೆ ಬಿಡುವಲ್ಲಿ ಯಶಸ್ವಿಯಾಗಿರುವುದು ಮೆಚ್ಚುಗೆಗೂ ಅಚ್ಚರಿಗೂ ಕಾರಣವಾಗುತ್ತದೆ" ಎಂದಿದ್ದಾರೆ. ಇನ್ನು, ಈ ಕಾಲಘಟ್ಟದ ಪ್ರಮುಖ ಕವಿ ವಾಸುದೇವ ನಾಡಿಗ್ ಅವರು "ಬಯಕೆ ತೋಟ ಮತ್ತು ಕರಣಗಣದ ಈ ರಿಂಗಣ" ಎಂಬ ಮೊದಲ ಓದಿನ ರಿಂಗಣವನ್ನು ಕವಿ ಮನದ ಲಯದಲ್ಲೇ ವ್ಯಕ್ತಪಡಿಸಿದ್ದಾರೆ. ಈ ಕಾದಂಬರಿಯ ಮೂಲಕ ಪೂರ್ಣಿಮಾ ಮಾಳಗಿಮನಿ ಅವರು ಕನ್ನಡದ ಸಾಹಿತ್ಯಲೋಕದಲ್ಲಿ ಭರವಸೆಯನ್ನು ಮೂಡಿಸಿದ್ದಾರೆ. ಇತ್ತೀಚಿಗಷ್ಟೇ ಶ್ರುತಿ ಬಿ.ಎಸ್. ಅವರ "ಕರ್ತೃ", ರಾಜುಗಡ್ಡಿ ಅವರ "ಚೆಕ್ ಪೋಸ್ಟ್" ಎಂಬ ವಿನೂತನ ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ತುಮಕೂರಿನ ಗೋಮಿನಿ ಪ್ರಕಾಶನ ಈ ಕಾದಂಬರಿಯನ್ನು ಪ್ರಕಟಿಸಿದೆ. ಓದುಗರು "ಇಜಯಾ" ಓದಿನ ನಂತರ ತಮ್ಮ ಕನಸುಗಳ ಗಂಟನ್ನು ಬಿಚ್ಚಿ ತಮ್ಮ ಮುಂದೆ ಹರವಿಕೊಳ್ಳುವುದರಲ್ಲಿ ಸಂಶಯವಿಲ್ಲ.
ಗೋಮಿನಿ ಪ್ರಕಾಶನ, ತುಮಕೂರು. ರೂ. 160/-